ಪಾಲಿಶ್ ಮಾಡದ ಸಾವಯವ ಅಕ್ಕಿಯೂ ಕಾಯಿಲೆ ತರುತ್ತದೆ!
🙏🏼 ಅಮೃತಾತ್ಮರೇ, ನಮಸ್ಕಾರ 🙏🏼
🍁 ಪಾಲಿಶ್ ಮಾಡದ ಸಾವಯವ ಅಕ್ಕಿಯೂ ಕಾಯಿಲೆ ತರುತ್ತದೆ! 🍁
•••••••••••••••••••••••••••••••••••••••••••
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
ಸಂಚಿಕೆ: 752, ದಿನಾಂಕ: 01.09.2023
•••••••••••••••••••••••••••••••••••••••••••
ಪಾಲೀಶ್ ಮಾಡದ ಅಕ್ಕಿಯ ಗುಣ:
• ಹೆಚ್ಚಿನ ಪೋಷಕಾಂಶಗಳು ಇರುತ್ತವೆ
• ಜೀರ್ಣಕ್ಕೆ ಸರಳ ಅಥವಾ ಸುಲಭವಲ್ಲ
• ಎಲ್ಲಾ ಪೋಷಕಾಂಶಗಳು ಶರೀರಕ್ಕೆ ಸೇರುವುದಿಲ್ಲ
• ಕಫವನ್ನೂ ಹೆಚ್ಚಿಸುತ್ತದೆ
• ಪ್ರಮೇಹ ಮತ್ತು ಮಧುಮೇಹಗಳನ್ನು ಹೆಚ್ಚಿಸುತ್ತದೆ
ಪಾಲೀಶ್ ಮಾಡದ ಈ ಅಕ್ಕಿಯ ಮೇಲ್ಭಾಗದಲ್ಲಿ ಇರುವ ಜಿಡ್ಡಿನಂತಹ ಪದಾರ್ಥಗಳಲ್ಲಿ ಶ್ರೇಷ್ಠ ಪೋಷಕಾಂಶಗಳು ಹೇರಳವಾಗಿ ಶೇಖರಣೆಗೊಂಡಿರುತ್ತವೆ. ಸಾವಯವ ರೀತಿಯಲ್ಲಿ ಬೆಳೆದಿದ್ದರಂತೂ ಅತ್ಯಂತ ಶ್ರೇಷ್ಠ ಪೋಷಕ ಪದಾರ್ಥಗಳು ಯಥೇಚ್ಛವಾಗಿ ಸಂಗ್ರಹವಾಗಿರುತ್ತವೆ.
ಪಾಲಿಶ್ ಮಾಡಿದ ಅಕ್ಕಿಯ ಗುಣ:
ಹೋಲಿಕೆಯಲ್ಲಿ ಕಡಿಮೆ ಪೋಷಕಾಂಶಗಳು ಇರುತ್ತವೆ.
ಪಾಲೀಶ್ ಮಾಡಿದರೆ ಅಕ್ಕಿಯ ಮೇಲ್ಭಾಗದಲ್ಲಿ ಇರುವ ಜಿಡ್ಡಿನಂತಹ ವಸ್ತು ಹೊರಹೋಗುತ್ತದೆ ಮತ್ತು ಅದರೊಂದಿಗೆ ಪೋಷಕಾಂಶಗಳು ಹೊರಹೋಗುತ್ತವೆ. ಆದ್ದರಿಂದ ಈ ಅಕ್ಕಿ --
• ಜೀರ್ಣಕ್ಕೆ ಸರಳ ಅಥವಾ ಸುಲಭ
• ಉಳಿದಿರುವ ಬಹುತೇಕ ಎಲ್ಲಾ ಪೋಷಕಾಂಶಗಳು ಶರೀರಕ್ಕೆ ಸೇರುತ್ತವೆ
• ಕಫವನ್ನು ಹೆಚ್ಚಿಸುವುದಿಲ್ಲ
• ಪ್ರಮೇಹ ಮತ್ತು ಮಧುಮೇಹಗಳನ್ನು ಹೆಚ್ಚಿಸುವುದಿಲ್ಲ ಅಥವಾ ನಿಯಂತ್ರಿಸುತ್ತದೆ...
•••••••••••••••••••••••••••••••••••••••••••
ವಿಶ್ಲೇಷಣೆ:
ಎಷ್ಟೇ ಪೋಷಕಾಂಶಗಳು ಇವೆ ಎಂದರೂ ಅವು ಮಾಲಿಕ್ಯೂಲ್ಗಳಾಗಿ ವಿಭಜನೆ ಹೊಂದಿ, ನಮ್ಮ ರಕ್ತ ಸೇರಿ, ಜೀವಕೋಶಗಳ ಒಳಗೆ ಹೋದ ಮೇಲೆಯೇ ಶಕ್ತಿಯನ್ನು, ಆರೋಗ್ಯವನ್ನೂ ಕೊಡುವವು. ಈ ಎಲ್ಲಾ ಕಾರ್ಯಗಳು ನಡೆಯಲು ಹೆಚ್ಚಿನ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಲೇಬೇಕು.
ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ:
ಶಾರೀರಿಕ ಶ್ರಮ ಮಾಡದಿದ್ದರೆ ಬಲವಾನ್ ಪೋಷಕಾಂಶಗಳು ವಿಭಜನೆ ಹೊಂದದೇ ಅಂಟಿನಂತೆ ಶರೀರದ ರಕ್ತ, ಮಾಂಸ, ಮೇದಸ್ಸುಗಳಲ್ಲಿ ಶೇಖರಣೆಗೊಳ್ಳುತ್ತವೆ, ಈ ಎಲ್ಲಾ ಪೋಷಕಾಂಶಗಳು ಅಂಟು ಅಥವಾ ಗೊಬ್ಬರದ ರೂಪದಲ್ಲಿ ಸಂಗ್ರಹವಾಗಿರುವ ಕಾರಣ ವ್ಯಾಯಾಮ ಮಾಡದ ದೇಹಿಗಳಿಗೆ ಆ ಪೋಷಕಾಂಶಗಳು ಕೆಟ್ಟು, ಅಲ್ಲಿ ವಿಗುಣತೆ ತರುವ ಕಾರಣ, ರೋಗವನ್ನು ತಂದೇ ತರುತ್ತವೆ! 🤔
ಹಾಗಾಗಿ, ಯಾವ ಅಕ್ಕಿಯನ್ನು ಯಾರು ಸೇವಿಸಬಹುದೆಂದು ನಿರ್ಧರಿಸಿ ಸೇವಿಸಿದರೆ ಸತ್ಪರಿಣಾಮ ಸಾಧ್ಯ, ಇಲ್ಲದಿದ್ದರೆ 'ಪಾಲೀಶ್ ಮಾಡದ ಸಾವಯವ ಅಕ್ಕಿಯೇ ರೋಗವನ್ನು ತರುತ್ತದೆ.'
ಗಮನಿಸಿ ನೋಡಿ:
ಚೆನ್ನಾಗಿ ಕೆಲಸ ಮಾಡುವ ಗ್ರಾಮೀಣ ಭಾಗದ ನಿಜವಾದ ರೈತರ ಮಾಂಸಖಂಡಗಳು ಎಷ್ಟು ದೃಢವಾಗಿ ಇರುತ್ತವೆ, ಅಲ್ಲವೇ? ಅವರೇನು ನಿತ್ಯವೂ ಡ್ರೈ ಫ್ರೂಟ್ ತಿನ್ನುತ್ತಿಲ್ಲವಲ್ಲ! ಹಾಗಾಗಿ ಪಾಲೀಶ್ ಮಾಡದ ಅಕ್ಕಿಯಿಂದ ಲಾಭ ಗಳಿಸಲು ಮಾಡಲೇಬೇಕಾದ ಅತ್ಯಂತ ಅನಿವಾರ್ಯ ಕೆಲಸ ಎಂದರೆ ವ್ಯಾಯಾಮ, ಅದಿಲ್ಲದಿದ್ದರೆ ಪಾಲೀಶ್ ಮಾಡಿದ ಅಕ್ಕಿಯನ್ನು ತಿಂದು ಶಾರೀರಿಕವಾಗಿ ಅತಿಯಾದ ಶಕ್ತಿಯನ್ನು ಬಯಸದೇ, ಹಗುರವಾಗಿ ಆರೋಗ್ಯದಿಂದ ಇರುವುದು ಒಳ್ಳೆಯದು.
ಪಾಲೀಶ್ ಮಾಡಿದ ಅಕ್ಕಿ ರೋಗ ತರುವುದಿಲ್ಲ, ಹಾಗೆಂದು ಅತ್ಯಂತ ಶಾರೀರಿಕ ಶಕ್ತಿಯನ್ನು ತುಂಬುವುದಿಲ್ಲ, ಹಾಗಾಗಿ ಸಂತರ್ಪಣ ಜನ್ಯ ರೋಗಗಳಲ್ಲಿ ಪಾಲಿಶ್ ಮಾಡಿದ ಹಳೆಯ ಅಕ್ಕಿ ಬಳಸಿ ಎಂದು ಆಯುರ್ವೇದ ಆಚಾರ್ಯರು ಹೇಳುತ್ತಾರೆ. ವಿಶೇಷವಾಗಿ, ಆರಂಭಿಕ ಮಧುಮೇಹಿಗಳು, ನಿಜ ಮಧುಮೇಹ ರೋಗಿಗಳು ಪಾಲಿಶ್ ಮಾಡಿದ ಹಳೆಯ ಅಕ್ಕಿಯನ್ನೇ ಊಟ ಮಾಡಲು ತಿಳಿಸುತ್ತಾರೆ.
ಉಪಸಂಹಾರ:
ಎಲ್ಲರ ಶರೀರವೂ ದಢೂತಿಯಾಗಿ ಇರುವ ಅಗತ್ಯ ಇಲ್ಲ, ಸ್ಥೂಲ(ದಪ್ಪ) ಅಥವಾ ಕೃಶ(ತೆಳ್ಳಗೆ) ಇರುವುದು ಮುಖ್ಯವಲ್ಲ, ಆರೋಗ್ಯದಿಂದ ಇರುವುದು ಅತ್ಯಂತ ಮುಖ್ಯ. ಹಾಗಾಗಿ, ನಿಮ್ಮ ಜೀವನ ವಿಧಾನವನ್ನು ಗಮನಿಸಿಕೊಂಡು ಸೂಕ್ತ ಅಕ್ಕಿಯನ್ನು ಆಯ್ಕೆ ಮಾಡಿಕೊಳ್ಳಿ...
ನಿಮ್ಮ ದುಡಿಮೆ ಶಾರೀರಿಕ ಶ್ರಮದಾಯಕವಾಗಿ ಇದ್ದರೆ:
ಪಾಲೀಶ್ ಮಾಡದ ಹಳೆಯ ಅಕ್ಕಿಯನ್ನು ಆಹಾರವಾಗಿ ಬಳಸಿರಿ, ಅದು ಆರೋಗ್ಯವನ್ನೂ, ದೃಢಕಾಯವನ್ನೂ ಕೊಡುತ್ತದೆ.
ನಿಮ್ಮ ದುಡಿಮೆ ಬುದ್ಧಿಯ ಬಲದಿಂದ ಮಾತ್ರ ಇದ್ದರೆ:
ಪಾಲೀಶ್ ಮಾಡಿದ ಹಳೆಯ ಅಕ್ಕಿಯನ್ನು ಆಹಾರವಾಗಿ ಬಳಸಿರಿ, ಅದು ನಿಮಗೆ ಆರೋಗ್ಯವನ್ನೂ, ತೆಳ್ಳಗಿದ್ದರೂ ದೃಢಕಾಯವನ್ನೂ ಕೊಡುತ್ತದೆ.
ಧನ್ಯವಾದಗಳು
•••••••••••••••••••••••••••••••••••••••••••
'ಆಸ್ಪತ್ರೆ ರಹಿತ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್ನಲ್ಲಿ ಮಾತ್ರ ಕಾಣಸಿಗುತ್ತವೆ.
ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:
https://t.me/hospitalfreelife_kan
🙏🏼 ಧನ್ಯವಾದಗಳು 🙏🏼
•••••••••••••••••••••••••••••••••••••••••••
ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ
ಬ್ಲಾಗ್ ಲಿಂಕ್:
https://hospitalfreelife.blogspot.com
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ