ಹಣೆಬರಹ ದೊಡ್ಡದೇ? ನಮ್ಮ ಪ್ರಯತ್ನ ದೊಡ್ಡದೇ? ಭಾಗ-2

ಹಣೆಬರಹ ದೊಡ್ಡದೇ? ನಮ್ಮ ಪ್ರಯತ್ನ ದೊಡ್ಡದೇ? -- ಭಾಗ-2
••••••••••••••••••••••••••••••••••••••••••••••
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
ಸಂಚಿಕೆ: 738
ದಿನಾಂಕ: 21.05.2023
••••••••••••••••••••••••••••••••••••••••••••••
ನಮ್ಮ ಮೆದುಳಿಗಿಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಮನಸ್ಸು ಎಂದು ನೋಡಿದ್ದೇವೆ.

ಮನಸ್ಸಿಗೆ ನಮ್ಮ ಹಣೆಬರಹ ಬರೆಯುವ ಅಸಾಧಾರಣ ಸಾಮರ್ಥ್ಯ ಎಲ್ಲಿಂದ ಬಂದಿತು ಅಥವಾ ಯಾರು ಕೊಟ್ಟರು?!ಇದನ್ನು ನೋಡೋಣ...

  ನಮಗೆ ತಿಳಿಯದ ಯಾವುದಾದರೂ ವಿಷಯಗಳನ್ನು ದೇವರು ಅಥವಾ ಪ್ರಕೃತಿಗೆ ಬಿಡುತ್ತೇವೆ.

  ಆದರೆ ಮಾನವ ತನ್ನ ತರ್ಕಕ್ಕೆ ತಿಳಿಯದೇ ಇರುವ ವಿಷಯವನ್ನು ಮೂಢನಂಬಿಕೆ ಎಂದು ಕರೆಯುತ್ತಾನೆ ಮತ್ತು ಒಪ್ಪುವುದೇ? ಬಿಡುವುದೇ? ಎಂಬ ಅತಂತ್ರದಲ್ಲಿ ಮುಂದಡಿ ಇಟ್ಟು ಜೀವನವನ್ನು ಮುಗಿಸಿಬಿಡುತ್ತಾನೆ!

  ಬನ್ನಿ, ಇಂದು ನಮ್ಮ ಹಣೆಬರಹ ಬರೆದವರು ಯಾರು?! ಯಾರ ಕೈವಾಡದಿಂದ ನಾವು ಕಷ್ಟ ಅಥವಾ ಸುಖವನ್ನು ಅನುಭವಿಸುತ್ತಿದ್ದೇವೆ?! ಈ ಸತ್ಯವನ್ನು ತಿಳಿಯೋಣ...
••••••••••••••••••••••••••••••••••••••••••••••
  ನಮ್ಮ ಮನಸ್ಸಿನಲ್ಲಿ ಇಂದು  ಹೋಟೆಲಿನ ದೋಸೆ ತಿನ್ನಬೇಕು ಎನಿಸಿ ತಿನ್ನುತ್ತೇವೆ. ಅದರ ಪರಿಣಾಮ ಹೊಟ್ಟೆ ಕೆಡಬಹುದು ಅಥವಾ ಇಲ್ಲ. ಇದರ ಹಾಗೆಯೇ, ಇವನು ಮಗಳಿಗೆ ಸೂಕ್ತ ಎನಿಸಿ ಮದುವೆ ಮಾಡುತ್ತೇವೆ. ಆ ಮದುವೆ ಯಶಸ್ವಿಯಾಗಬಹುದು ಅಥವಾ ಕಷ್ಟಕರ ಜೀವನ ಸಾಗಿಸಬಹುದು ಅಥವಾ ಮುರಿದುಬೀಳಬಹುದು...

  ಮನಸ್ಸಿನಲ್ಲಿ ಇಂದೇಕೋ ದೋಸೆ ತಿನ್ನಬೇಕೆಂಬ 'ಬಯಕೆ' ಮೂಡಿದ್ದು ಎಲ್ಲಿಂದ?! ಮಗಳಿಗೆ ಮದುವೆ ಇವನೊಂದಿಗೇ ಸೂಕ್ತ ಎಂದು ಮನಸ್ಸಿಗೆ ಅನಿಸಿದ್ದು ಯಾವುದರಿಂದ?! ಹಾಗೆಯೇ, ಕೆಲವೊಮ್ಮೆ ಮನಸ್ಸಿಗೆ ಏನೋ ಅನಿಸಿದರೂ, ಅದು ಸಾಕಾರವಾಗದೇ ಜೀವನ ಬಂದಂತೆ, ಅದು ಹೆಜ್ಜೆ ಇಡಿಸಿದಂತೆ ನಡೆದುಕೊಳ್ಳಬೇಕಾಗುತ್ತದೆ!! ಇದೆಲ್ಲದರ ಮೂಲ ಎಲ್ಲಿಯದು?!

  ಮನಸ್ಸಿನ ಹಿಂದೆ ಕುಳಿತು ನಮ್ಮೊಳಗೆ ಈ ಅಭಿಲಾಷೆಗಳನ್ನು ಅಥವಾ ಭಾವನೆಗಳನ್ನು ಅಥವಾ ಬಯಕೆಗಳನ್ನು ಸೃಜಿಸುವುದು ಯಾವುದೋ ಅಜ್ಞಾತ ಶಕ್ತಿಯಲ್ಲ, ನಮ್ಮ ನಿನ್ನೆಯ ಕೆಲಸಗಳೇ ಇಂದು ರೂಪ ಪಡೆದು ಬರುತ್ತವೆ, ಅವೂ ನಮ್ಮೊಳಗಿನಿಂದಲೇ ಬರುತ್ತವೆ.

  ಹೊಲದಲ್ಲಿ ಜೋಳ ಬಿತ್ತಿದ್ದರೆ, ಸಕಾಲದಲ್ಲಿ ಜೋಳದ ಫಸಲನ್ನೇ ಕೊಡುವಂತೆ, ಹಿಂದಿನ ಕೆಲ ದಿನಗಳಲ್ಲೋ, ವರ್ಷಗಳಲ್ಲೋ, ಹಿಂದಿನ ಜನ್ಮಗಳಲ್ಲೋ ಮಾಡಿದ ಕೆಲಸಗಳಿಂದ 'ಮನದಲ್ಲಿ ಉಂಟಾಗುವ ಸ್ಪಂದನೆಗಳು' ಬೀಜಗಳಾಗಿ ಇಂದು ತತ್‌ಸಂಬಂಧಿತ ಆಲೋಚನೆ, ಅಭಿಲಾಷೆ, ಇಚ್ಛೆ ಅಥವಾ ಬಯಕೆಗಳನ್ನು ಪ್ರತಿ ಕ್ಷಣ ಹುಟ್ಟುಹಾಕುತ್ತಿರುತ್ತವೆ, ಅಂದರೆ ನಿರಂತರ ಇಚ್ಛೆಗಳನ್ನು ಸೃಜಿಸುವುದು. ಇದು ಯಾರೋ ಇಟ್ಟ ಅಥವಾ ಕೊಟ್ಟ ಆಲೋಚನೆಯಲ್ಲ, ನಮ್ಮದೇ ಕೆಲಸಗಳಿಂದ ಉಂಟಾಗುವ ಧನಾತ್ಮಕವಾದ ಅಥವಾ ಋಣಾತ್ಮಕ ಸ್ಪಂದನೆಗಳ ಸಂಚಯಗಳು. ಅಂದರೆ ನಾವೇ ದುಡಿದು ಕೂಡಿಟ್ಟ ಬ್ಯಾಂಕ್ ಬ್ಯಾಲೆನ್ಸ್. ಈ ಬ್ಯಾಲೆನ್ಸ್ ಆಧಾರದಲ್ಲಿ ನಮ್ಮ ಎಟಿಎಂ ಹಣ ಕೊಡುತ್ತದೆಯೇ ಹೊರತೂ ಎಟಿಎಂ ಅನ್ನು ಪೂಜೆ ಮಾಡಿ ಪ್ರಸನ್ನಗೊಳಿಸಿದರೆ ಕೊಡುವುದಿಲ್ಲ...

  ಹಾಗೆಯೇ, ಉತ್ತಮ ಜೀವನ ಬೇಕೇ, ಉತ್ತಮವಾಗಿ ಸ್ಪಂದಿಸಿ. ಶ್ರೇಷ್ಠ ಜೀವನ ಬೇಕೇ? ಶ್ರೇಷ್ಠ ರೀತಿಯಲ್ಲಿ ಸ್ಪಂದಿಸಿ.

  ಈ ಲೆಕ್ಕಾಚಾರ ಎಲ್ಲಾ ಕಷ್ಟವೇ, ಈ ಸೃಷ್ಟಿಯ ಮೂಲ ಶಕ್ತಿಗೆ ಶರಣಾಗಿ, ಸದ್ಯಕ್ಕೆ ಎದುರಿಗೆ ಬಂದ ಕೆಲಸದೊಂದಿಗೆ, ಜನರೊಂದಿಗೆ, ಜೀವಕೋಟಿಗಳೊಂದಿಗೆ ಹಿತವಾಗಿ ಸ್ಪಂದನೆ ಮಾಡಿದರೆ, ನಾಳೆಯ ಜೀವನ ಹಿತವಾಗಿ ಸಾಗುತ್ತದೆ... 🤔

  ನಮ್ಮ ನಮ್ಮ ಕೆಲಸಗಳು ಏನೇ ಇರಲಿ, ಕೆಲಸ ಎಂದಿಗೂ ಶ್ರೇಷ್ಠ ಅಥವಾ ಕನಿಷ್ಠ ಎಂದು ಇಲ್ಲವೇ ಇಲ್ಲ, ಹಿತವಾದ ಸ್ಪಂದನೆಯೊಂದನ್ನು 'ಪ್ರಯತ್ನ ಪೂರ್ವಕವಾಗಿ ' ರೂಢಿಸಿಕೊಳ್ಳುವುದೇ ಮಾನವ ಜೀವನ.

  ಈ ಪ್ರಯತ್ನದಂತೆ ನಮ್ಮ ಮುಂದಿನ ಜೀವನ ನಿಂತಿರುತ್ತದೆಯೇ ಹೊರತು, ಅದು ಕಾಣದ ಕೈಗಳು ನಮ್ಮ ಮೇಲೆ ಕೃಪೆ ಮಾಡುವ ಅಥವಾ ಶಾಪ ಹಾಕುವ ಕ್ರಿಯೆಯಿಂದ ಮೂಡಿದುದಲ್ಲ.

  ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್ ಇಡದೇ ಎಟಿಎಂ ನನಗೆ ಶಾಪ ಹಾಕುತ್ತಿದೆ ಎಂದು ಅದರ ಮುಂದೆ ಗೋಗರೆದು ಅತ್ತರೆ ಏನಾದರೂ ಫಲ ಲಭಿಸಬಹುದೇ? ನಿಮ್ಮ ಎಟಿಎಂ ಕಾರ್ಡ್ ನಿಮಗೆ ಕೃಪೆ ಮಾಡಿ ಹಣ ಕೊಡುತ್ತಿದೆಯೋ ಅಥವಾ ಅದು ನಮ್ಮದೇ ಸ್ವಂತ ದುಡಿಮೆಯೇ?!

  ನಮ್ಮೆಲ್ಲಾ ಹಣೆಬರಹ ಬರೆದುಕೊಳ್ಳುತ್ತಿರುವವರು ನಾವೇ ಆಗಿದ್ದೇವೆ. ಕೆಲಸ ಮಾಡದೇ ಯಾವುದೇ ಜಾತಿ, ಮತ, ಪಂಥಗಳ ದೇವದೇವರುಗಳ ಹಿಂದೆ ಬಿದ್ದರೂ ಅಥವಾ ಕೊನೆಯಲ್ಲಿ ತಿಳಿಯುವುದೇನೆಂದರೆ 'ಪ್ರಯತ್ನವೇ ಫಲದಾಯಕವಾಗಿದೆ'.

  'ಪ್ರಕೃತಿಯ ಈ ಶಕ್ತಿಗೆ, ದೈವಕ್ಕೆ ಶರಣಾಗುವೆ ' ಎಂದರೂ ಸಹ ಅದೂ ಸಹ 'ಮಾನಸಿಕ ತೀವ್ರ ಸ್ಪಂದನೆಯೇ ಆಗಿರುತ್ತದೆ.'

  ಒಟ್ಟಾರೆ, 'ಪ್ರಯತ್ನವೇ ಪರಮೇಶ್ವರ' ಎನುವುದು ಸ್ಪಷ್ಟ. ನಮ್ಮ ಹಣೆಬರಹದ ಕರ್ತೃಗಳು ನಾವೇ ಆಗಿದ್ದೇವೆ, ಹಾಗಾಗಿ ಪ್ರಯತ್ನದ ಹೊರತೂ ಅನ್ಯ ಮಾರ್ಗವೇ ಇಲ್ಲ...

     🙏🏼  ಧನ್ಯವಾದಗಳು  🙏🏼
••••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು